Karnataka news paper

ಮತಾಂತರಕ್ಕಿಂತಲೂ ಪಕ್ಷಾಂತರ ಅಪಾಯಕಾರಿ: ಬಿಜೆಪಿಗೆ ತನ್ವೀರ್ ಸೇಠ್ ಚಾಟಿ..


ಹೈಲೈಟ್ಸ್‌:

  • ಪಕ್ಷಾಂತರಿಗಳಿಂದ ನಡೆಯುತ್ತಿರುವ ಸರ್ಕಾರಕ್ಕೆ ಈ ಕಾಯ್ದೆಯನ್ನು ಜಾರಿಗೆ ತರುವ ನೈತಿಕತೆ ಇಲ್ಲ
  • ಯಾರು ಯಾವ ಧರ್ಮಕ್ಕೆ ಬೇಕಾದರೂ ಹೋಗಬಹುದು, ನಮ್ಮದು ಜಾತ್ಯತೀತ ರಾಷ್ಟ್ರ.
  • ನಮಗೆ ಸಂವಿಧಾನ ಎಲ್ಲಾ ರೀತಿಯ ಧಾರ್ಮಿಕ ಸ್ವಾತಂತ್ರ‍್ಯ ನೀಡಿದೆ: ಶಾಸಕ ತನ್ವೀರ್ ಸೇಠ್

ಮೈಸೂರು: ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಮತಾಂತರ ನಿಷೇಧ‌ ಕಾಯ್ದೆ ಕುರಿತಾಗಿ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ಶಾಸಕ ತನ್ವೀರ್‌ ಸೇಠ್, ಮತಾಂತರಕ್ಕಿಂತಲೂ ಪಕ್ಷಾಂತರ ಬಹಳ ಅಪಾಯಕಾರಿಯಾಗಿದ್ದು, ಪಕ್ಷಾಂತರಿಗಳಿಂದಲೇ ರಚನೆಯಾದ ಬಿಜೆಪಿ ಸರ್ಕಾರದಿಂದ ಮತ್ತೇನು ನಿರೀಕ್ಷಿಸಲು ಸಾಧ್ಯ ಎಂದು ವ್ಯಂಗ್ಯವಾಡಿದ್ದಾರೆ.

ಮೈಸೂರಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆ ಜಾರಿಗೆ ಮುಂದಾಗಿರೋ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ಮತಾಂತರಕ್ಕಿಂತಲೂ ಈಗ ಪಕ್ಷಾಂತರ ಅಪಾಯಕಾರಿ. ಪಕ್ಷಾಂತರಿಗಳಿಂದ ನಡೆಯುತ್ತಿರುವ ಸರ್ಕಾರಕ್ಕೆ ಈ ಕಾಯ್ದೆಯನ್ನು ಜಾರಿಗೆ ತರುವ ನೈತಿಕತೆ ಇಲ್ಲ. ಯಾರು ಯಾವ ಧರ್ಮಕ್ಕೆ ಬೇಕಾದರೂ ಹೋಗಬಹುದು. ನಮ್ಮದು ಜಾತ್ಯತೀತ ರಾಷ್ಟ್ರ. ನಮಗೆ ಸಂವಿಧಾನ ಎಲ್ಲಾ ರೀತಿಯ ಧಾರ್ಮಿಕ ಸ್ವಾತಂತ್ರ‍್ಯ ನೀಡಿದೆ. ಧಾರ್ಮಿಕ ಸ್ವಾತಂತ್ರ‍್ಯ ಪ್ರತಿಯೊಬ್ಬ ಪ್ರಜೆಯ ಹಕ್ಕಾಗಿದೆ ಎಂದರು.

ಮತಾಂತರ ನಿಷೇಧ ಕಾಯಿದೆ ಮೂಲಕ ಮತದಾರರ ಸೆಳೆಯಲು ಬಿಜೆಪಿ ಯತ್ನ: ಸಿದ್ದರಾಮಯ್ಯ ಆಕ್ರೋಶ
ಒಂದು ವೇಳೆ ಈ ಮಸೂದೆ ಅಂಗೀಕಾರ ಆದರೂ ಅದರ ವಿರುದ್ಧ ಹೋರಾಟ ಮಾಡುತ್ತೇವೆ. ಕೃಷಿ ಕಾಯ್ದೆಗಳ ವಿರುದ್ಧ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಾಯ್ದೆಗಳನ್ನ ವಾಪಸ್ ಪಡೆಯಿತು. ಅದೇ ಮಾದರಿಯಲ್ಲಿ ಮತಾಂತರ ನಿಷೇಧ ಕಾಯ್ದೆ ವಿರುದ್ಧ ಹೋರಾಟ ಮಾಡುತ್ತೇವೆ. ಸದ್ಯದ ಪರಿಸ್ಥಿತಿಯಲ್ಲಿ ಒಬ್ಬ ವ್ಯಕ್ತಿ ಮತಾಂತರ ಆಗಲು ಒಂದು ತಿಂಗಳ ಮುಂಚಿತವಾಗಿ ಅರ್ಜಿ ಹಾಕಿ ಬದುಕುವ ವಾತಾವರಣ ಈಗಿನ ಸರ್ಕಾರದಲ್ಲಿ ಇದೆಯೇ ಎಂಬುದನ್ನು ಆಲೋಚಿಸಬೇಕಿದೆ. ಈ ದಿಸೆಯಲ್ಲಿ ಕಾಯ್ದೆ ಪುನರ್ ಪರಿಶೀಲನೆ ಆಗಬೇಕಿದೆ ಎಂದು ತನ್ವೀರ್ ಸೇಠ್ ತಿಳಿಸಿದರು.

ಹದಗೆಟ್ಟ ರಸ್ತೆ ಸಂಬಂಧ ಸಭೆ: ಎನ್ ಆರ್ ಕ್ಷೇತ್ರದಲ್ಲಿ ರಸ್ತೆಗಳು ಹದಗೆಟ್ಟ ವಿಚಾರವಾಗಿ ಮಾತನಾಡಿದ ಅವರು, ನಗರ ಪಾಲಿಕೆ ಅಧಿಕಾರಿಗಳ ಸಭೆ ಕರೆಯಲಾಗಿದೆ. ಸರ್ಕಾರದಿಂದ ನಮಗೆ ಯವುದೇ ಅನುದಾನ ಬಂದಿಲ್ಲ. ಇದೆಲ್ಲಾ ಸ್ಥಳೀಯ ಸಂಸ್ಥೆಗಳಿಂದಲೇ ಅಭಿವೃದ್ಧಿ ಆಗಬೇಕು. ನಮಗೂ ಕೂಡ ಅನುದಾನದ ಕೊರತೆ ಇದೆ. ಅಕ್ಟೋಬರ್‌ನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ರಸ್ತೆ ಗುಂಡಿ ಸಮಸ್ಯೆ ಹೆಚ್ಚಾಗಿದ್ದು, ಶೀಘ್ರ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದರು.

ಮತಾಂತರ ಹೆಸರಿನಲ್ಲಿಅನಗತ್ಯ ಕಿರುಕುಳ ನೀಡಲು ಕಾಯಿದೆ: ಕಾಂಗ್ರೆಸ್‌ ಆರೋಪ
ಮೇಕೆದಾಟು ವಿಚಾರವಾಗಿ ಪಕ್ಷದ ಅಣತಿಯಂತೆ ಹೋರಾಟ ನಡೆಸಲಾಗುತ್ತಿದೆ. ಅಲ್ಲದೆ, ಪಕ್ಷ ಮಾತ್ರವಲ್ಲದೆ ನಾಡು, ನುಡಿ, ನೆಲ ಹಾಗೂ ಭಾಷಾಭಿಮಾನ ಇರುವ ಪ್ರತಿಯೊಬ್ಬರೂ ಮೇಕೆದಾಟು ವಿಚಾರದಲ್ಲಿ ಹೋರಾಟಕ್ಕೆ ಕೈ ಜೋಡಿಸಬಹುದಾಗಿದೆ. ಅಲ್ಲದೆ ತಮಿಳುನಾಡು ಸರ್ಕಾರವೇ ಲಿಖಿತ ರೂಪದಲ್ಲಿ ನಮ್ಮ ನೀರು ನಮಗೆ ಕೊಟ್ಟು ಉಳಿದ ನೀರು ಬಳಕೆಗೆ ನಮ್ಮ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದೆ. ಹೀಗಿರುವಾಗ ಸರ್ಕಾರದ ನಿರ್ಲಕ್ಷ್ಯದಿಂದ ಯೋಜನೆ ವಿಳಂಬವಾಗುತ್ತಿದೆ. ಹೀಗಾಗಿ ಎಲ್ಲರೂ ಒಗ್ಗೂಡಿ ಹೋರಾಟಕ್ಕಿಳಿಯಬೇಕಿದೆ ಎಂದು ಹೇಳಿದರು.

ಇದೇ ವೇಳೆ ಮೈಸೂರು ನಗರದ ಎನ್. ಆರ್. ಮೊಹಲ್ಲಾದ ಮಾರುತಿ ಸರ್ಕಲ್‌ನಲ್ಲಿ ಪ್ರಾರಂಭಗೊಂಡ ನೂತನ ಕಾವೇರಿ ಮೆಸ್ ಮಾಂಸಹಾರಿ ಹೋಟೆಲ್‌ಗೆ ಶಾಸಕ ತನ್ವೀರ್‌ ಸೇಠ್ ಭೇಟಿ ನೀಡಿದರು. ಉಪ ಮೇಯರ್ ಅನ್ವರ್‌ ಬೇಗ್, ಪಾಲಿಕೆ ಸದಸ್ಯರಾದ ಪ್ರೇಮಾ ಶಂಕರೇ ಗೌಡ, ಸಯ್ಯದ್ ಹಸರತ್‌ವುಲ್ಲಾ, ಕಾವೇರಿ ಮೆಸ್ ಮಾಲೀಕ ಸಿದ್ದರಾಜುಗೌಡ ಇತರರು ಉಪಸ್ಥಿತರಿದ್ದರು.

ಮಾನವ ಧರ್ಮವನ್ನ ಒಡೆಯುವ ಕೆಲಸ ಸರಿಯಲ್ಲ: ಮತಾಂತರ ನಿಷೇಧ ಕಾಯ್ದೆಗೆ ವಿಶ್ವನಾಥ್‌ ವಿರೋಧ



Read more