Karnataka news paper

ಮತಾಂತರ ನಿಷೇಧ ಕಾಯ್ದೆ; ಕ್ರಿಶ್ಚಿಯನ್ನರಿಗೆ ಆತಂಕ ಬೇಡ: ಬಸವರಾಜ ಬೊಮ್ಮಾಯಿ


ಹುಬ್ಬಳ್ಳಿ: ಮತಾಂತರ ನಿಷೇಧ ಕಾಯ್ದೆ ಜಾರಿಗೆ ಬಂದರೆ ಕ್ರಿಶ್ಚಿಯನ್ನರು ಆತಂಕ ಪಡುವ ಅಗತ್ಯವಿಲ್ಲ. ಅವರ ಧಾರ್ಮಿಕ ಆಚರಣೆಗೆ ಯಾವುದೇ ಕುತ್ತು ಬರುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಭಾನುವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಬಡತನ, ಮನೆಯ ಪರಿಸ್ಥಿತಿ ದುರುಪಯೋಗಪಡಿಸಿಕೊಂಡು ಹಾಗೂ ಆಮಿಷ ಒಡ್ಡಿ ‌ಮತಾಂತರಕ್ಕೆ ಯತ್ನಿಸುವವರಿಗೆ ಕಡಿವಾಣ ಹಾಕಲು ಕಾಯ್ದೆ ಅನುಕೂಲವಾಗಲಿದೆ. ಸ್ವಾತಂತ್ರ್ಯ ನಂತರ ಇದರ ಬಗ್ಗೆ ಅನೇಕ ಬಾರಿ ಚರ್ಚೆಗಳಾಗಿವೆ. ಮತಾಂತರ ನಿಷೇಧ ಕಾಯ್ದೆ ಜಾರಿಯಾಗಬೇಕು ಎಂಬುದು ಬಹಳಷ್ಟು ಜನರ ಒತ್ತಾಸೆಯೂ ಆಗಿದೆ’ ಎಂದರು.

ಇದರ ಬಗ್ಗೆ ಕಾನೂನು ಇಲಾಖೆ ಕರಡು ಸಿದ್ಧಪಡಿಸುತ್ತಿದ್ದು, ಡಿ. 13ರಿಂದ ಆರಂಭವಾಗಲಿರುವ ಬೆಳಗಾವಿ ಅಧಿವೇಶನದಲ್ಲಿ ಚರ್ಚೆಯಾಗಲಿದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌, ಸಿಖ್‌ ಹೀಗೆ ಎಲ್ಲಾ ಧರ್ಮಗಳು ಸಂವಿಧಾನಾತ್ಮಕವಾಗಿಯೇ ರಚನೆಯಾಗಿವೆ. ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆ ತರದ ಹಾಗೆ ಕ್ರಮ ಕೈಗೊಳ್ಳಲಾಗುವುದು. ಕಾಯ್ದೆ ಜಾರಿಗೆ ಬಂದರೆ ಕ್ರಿಶ್ಚಿಯನ್ನರು ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಬೆಳಗಾವಿ ಅಧಿವೇಶನದ ಬಗ್ಗೆ ಪ್ರತಿಕ್ರಿಯಿಸಿ ‘ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ. ಪ್ರಮುಖ ವಿಷಯಗಳ ಬಗ್ಗೆ ಅರ್ಥಪೂರ್ಣ ಚರ್ಚೆಯಾಗಬೇಕು ಎನ್ನುವ ಆಸೆ ನಮ್ಮದು. ಸಮಗ್ರ ಕರ್ನಾಟಕ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಅಭಿವೃದ್ಧಿಯಾಗಬೇಕು’ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟರ್ ಖಾತೆ ಹ್ಯಾಕ್‌ ಬಗ್ಗೆ ಕೇಳಿದ ಪ್ರಶ್ನೆಗೆ, ‘ಮೋದಿ ಅವರು ಈ ಕುರಿತು ಈಗಾಗಲೇ ಮಾತನಾಡಿದ್ದಾರೆ. ಬಹಳಷ್ಟು ಕಡೆ ಹ್ಯಾಕ್‌ ಮಾಡುವ ಘಟನೆಗಳು ನಡೆಯುತ್ತಿವೆ. ತಾಂತ್ರಿಕ ಬಲದಿಂದ ಅವುಗಳಿಗೆ ಕಡಿವಾಣ ಹಾಕುವ ಕೆಲಸ ಮಾಡುತ್ತಿದ್ದೇವೆ’ ಎಂದರು.



Read more from source