Karnataka news paper

ಬೆಳಗಾವಿ ಅಧಿವೇಶನ: ಸದನದಲ್ಲಿ ಸರ್ಕಾರವನ್ನು ಕಟ್ಟಿಹಾಕಲು ಕಾಂಗ್ರೆಸ್ ಬಳಿ ಇವೆ ಹಲವು ಅಸ್ತ್ರಗಳು!


ಹೈಲೈಟ್ಸ್‌:

  • ಸೋಮವಾರದಿಂದ ವಿಧಾನಮಂಡಲ ಚಳಿಗಾಲದ ಅಧಿವೇಶನ ಬೆಳಗಾವಿ ಸುವರ್ಣ ಸೌಧದಲ್ಲಿ ಆರಂಭ
  • ಆಡಳಿತ ಪಕ್ಷವನ್ನು ಸದನದಲ್ಲಿ ಕಟ್ಟಿಹಾಕಲು ಕಾಂಗ್ರೆಸ್ ಸಜ್ಜು
  • ವಿರೋಧ ಪಕ್ಷ ಕಾಂಗ್ರೆಸ್ ಬತ್ತಳಿಕೆಯಲ್ಲಿ ಹಲವು ಅಸ್ತ್ರಗಳು

ಬೆಂಗಳೂರು: ಸೋಮವಾರದಿಂದ ವಿಧಾನಮಂಡಲ ಚಳಿಗಾಲದ ಅಧಿವೇಶನ ಬೆಳಗಾವಿ ಸುವರ್ಣ ಸೌಧದಲ್ಲಿ ಆರಂಭವಾಗಲಿದ್ದು ಆಡಳಿತ ಪಕ್ಷವನ್ನು ಸದನದಲ್ಲಿ ಕಟ್ಟಿಹಾಕಲು ಕಾಂಗ್ರೆಸ್ ಸಜ್ಜಾಗಿದೆ. ವಿರೋಧ ಪಕ್ಷ ಕಾಂಗ್ರೆಸ್ ಬತ್ತಳಿಕೆಯಲ್ಲಿ ಹಲವು ಅಸ್ತ್ರಗಳಿದ್ದು ಅವುಗಳನ್ನು ಪ್ರಯೋಗ ಮಾಡಿ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಸಜ್ಜಾಗುತ್ತಿದೆ.

ಕಾಂಗ್ರೆಸ್ ಬತ್ತಳಿಕೆಯಲ್ಲಿರುವ ಅಸ್ತ್ರಗಳೇನು?
ಬಿಟ್‌ ಕಾಯಿನ್ ಹಗರಣ

ಬಿಟ್‌ ಕಾಯಿನ್ ಹಗರಣವನ್ನು ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸಿ ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟುಮಾಡಲು ಕಾಂಗ್ರೆಸ್ ಸಜ್ಜಾಗಿದೆ. ಈಗಾಗಲೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಈ ಕುರಿತಾಗಿ ದಾಖಲೆ ಸಂಗ್ರಹ ಮಾಡಿದ್ದಾರೆ. ಬಿಟ್‌ ಕಾಯಿನ್ ಹಗರಣದಲ್ಲಿ ಇಬ್ಬರು ಪ್ರಭಾವಿಗಳು ಭಾಗಿಯಾಗಿದ್ದಾರೆ ಎಂಬ ಆರೋಪವನ್ನು ಕಾಂಗ್ರೆಸ್ ಮಾಡುತ್ತಿದೆ. ಇದೀಗ ಇದೇ ವಿಚಾರವನ್ನು ಇಟ್ಟುಕೊಂಡು ಸದನದಲ್ಲಿ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಶೇ.40 ಪರ್ಸಂಟೇಜ್ ಬಗ್ಗೆ ಗುತ್ತಿಗೆದಾರರ ಆರೋಪ
ಕಾಮಗಾರಿಗಳ ಗುತ್ತಿಗೆ ಪಡೆಯಲು 40 ಶೇ ಪರ್ಸಂಟೇಜ್ ನೀಡಬೇಕು ಎಂದು ಆರೋಪಿಸಿ ಗುತ್ತಿಗೆ ದಾರರ ಸಂಘ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದೆ. ಈ ಬಗ್ಗೆ ತನಿಖೆಯೂ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಕಾಂಗ್ರೆಸ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು ಸದನದಲ್ಲೂ ಪ್ರಸ್ತಾಪಿಸಿ ಆಡಳಿತ ಪಕ್ಷಕ್ಕೆ ಮುಜುಗರ ಉಂಟು ಮಾಡಲು ಸಿದ್ಧಗೊಂಡಿದೆ.

ಬೆಳಗಾವಿ ಅಧಿವೇಶನ: ಕಾಂಗ್ರೆಸ್‌ ಕಾರ್ಯತಂತ್ರಗಳ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದ ಡಿಕೆ ಶಿವಕುಮಾರ್‌

ಮೇಕೆದಾಟು ಯೋಜನೆ ವಿಳಂಬ
ಮೇಕೆದಾಟು ಸೇರಿದಂತೆ ನೀರಾವರಿ ಯೋಜನೆಗಳ ಜಾರಿಗೆ ವಿಳಂಬ ನೀತಿ ಅನುಸರಿಸುತ್ತಿರುವ ಸರ್ಕಾರದ ನಡೆಯನ್ನು ಕಾಂಗ್ರೆಸ್ ಸದನದಲ್ಲೂ ಪ್ರಸ್ತಾಪಿಸಲು ನಿರ್ಧಾರ ಮಾಡಿದೆ. ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಜನವರಿಯಲ್ಲಿ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ. ಮೇಕೆ ದಾಟು ಯೋಜನೆ ಜೊತೆಗೆ ಮಹದಾಯಿ ಹಾಗೂ ಇನ್ನಿತರ ಯೋಜನೆಗಳ ಜಾರಿ ವಿಳಂಬ ವಿಚಾರವಾಗಿ ಸರ್ಕಾರವನ್ನು ಇಕ್ಕಟ್ಟಿಕೆ ಸಿಲುಕಿಸಲು ಕಾಂಗ್ರೆಸ್ ತಯಾರಿ ನಡೆಸುತ್ತಿದೆ.

ಅಕಾಲಿಕ ಮಳೆ ಹಾನಿ ಪರಿಹಾರ ವಿಳಂಬ
ಇನ್ನು ಅಕಾಲಿಕ ಮಳೆಗೆ ರಾಜ್ಯದಲ್ಲಿ ವ್ಯಾಪಕ ಹಾನಿ ಉಂಟಾಗಿದ್ದು ಇದರ ಪರಿಹಾರ ನೀಡುವಲ್ಲಿ ಸರ್ಕಾರ ವಿಳಂಬ ಆಗಿರುವ ಬಗ್ಗೆಯೂ ಸದನದಲ್ಲಿ ಕಾಂಗ್ರೆಸ್ ಪ್ರಸ್ತಾಪ ಮಾಡಲಿದೆ.

ಅಂತಿಮ ಹಂತಕ್ಕೆ ಬೆಳಗಾವಿ ಅಧಿವೇಶನ ಸಿದ್ಧತೆ, ಬಂದೋಬಸ್ತ್‌ಗೆ 4500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

ಕೋವಿಡ್ ಮೃತಪಟ್ಟ ಕುಟುಂಬಗಳಿಗೆ ಸಿಗದ ಪರಿಹಾರ
ಇಷ್ಟೇ ಅಲ್ಲದೆ ಕೋವಿಡ್‌ನಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡದ ವಿಚಾರವಾಗಿಯೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಕಾಂಗ್ರೆಸ್ ಸಜ್ಜಾಗಿದೆ. ಕೋವಿಡ್‌ನಿಂದ ಮೃತಪಟ್ಟ ಕುಟುಂಬಗಳಿಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವ ಭರವಸೆಯನ್ನು ಸರ್ಕಾರ ನೀಡಿತ್ತು. ಆದರೆ ಪರಿಹಾರ ಮಾತ್ರ ಈವರೆಗೆ ಮೃತರ ಕುಟುಂಬಸ್ಥರಿಗೆ ತಲುಪಿಲ್ಲ.

ಒಟ್ಟಿನಲ್ಲಿ ಈ ಎಲ್ಲಾ ವಿಚಾರಗಳನ್ನು ಸದನದಲ್ಲಿ ಪ್ರಸ್ತಾಪ ಮಾಡಿ ಆಡಳಿತ ಪಕ್ಷದ ವಿರುದ್ಧ ಒಂದಾದರ ಮೇಲೊಂದರಂತೆ ಬಾಣ ಪ್ರಯೋಗ ಮಾಡಲು ಕಾಂಗ್ರೆಸ್ ಸಜ್ಜಾಗಿದೆ. ಇಗಾಗಲೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಚರ್ಚೆ ನಡೆಸಿದ್ದು ಸದನದಲ್ಲಿ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ನಿಟ್ಟಿನಲ್ಲಿ ತಂತ್ರಗಾರಿಕೆ ರೂಪಿಸುತ್ತಿದ್ದಾರೆ.



Read more