Karnataka news paper

ಹೊನ್ನಾಳಿಯ ಕೆರೆಗಳಿಗೆ ನೀರು ತುಂಬಿಸಲು 518 ಕೋಟಿ ರೂ. ಬಿಡುಗಡೆ – ರೇಣುಕಾಚಾರ್ಯ


ಹೈಲೈಟ್ಸ್‌:

  • ಹನುಮಸಾಗರ ಏತ ಯೋಜನೆಗೆ ಶಂಕುಸ್ಥಾಪನೆ
  • 17 ಗ್ರಾಮಗಳ 30 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಚಾಲನೆ
  • ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 518 ಕೋಟಿ ರೂ. ಬಿಡುಗಡೆಯಾಗಿದೆ ಎಂದ ಸಿಎಂ ರಾಜಕೀಯ ಕಾರ್ಯದರ್ಶಿ

ಹೊನ್ನಾಳಿ (ದಾವಣಗೆರೆ): ಹೊನ್ನಾಳಿ ವಿಧಾನಸಭಾ ಕ್ಷೇತ್ರವನ್ನು ಜಲಸಮೃದ್ಧ ಕ್ಷೇತ್ರವನ್ನಾಗಿ ಪರಿವರ್ತಿಸುವುದು ನನ್ನ ಗುರಿಯಾಗಿದ್ದು, ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 518 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ತಾಲೂಕಿನ ಹನುಮಸಾಗರ ಗ್ರಾಮದ ಬಳಿಯ ತುಂಗಭದ್ರಾ ನದಿ ದಂಡೆಯಲ್ಲಿ ಭಾನುವಾರ ಹೊನ್ನಾಳಿ – ನ್ಯಾಮತಿ ತಾಲೂಕುಗಳ 17 ಗ್ರಾಮಗಳ 30 ಕೆರೆಗಳಿಗೆ ನೀರು ತುಂಬಿಸುವ ಉದ್ದೇಶದ 112 ಕೋಟಿ ರೂ. ವೆಚ್ಚದ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ತುಂಗಭದ್ರಾ ನದಿಯ ಮೇಲ್ಭಾಗದಲ್ಲಿಬರುವ ಹಳ್ಳಿಗಳ ಕೆರೆಗಳಿಗೆ ನೀರು ತುಂಬಿಸಲು 460 ಕೋಟಿ ರೂ., ತುಂಗಭದ್ರೆ ಕೆಳಭಾಗದ ಹಳ್ಳಿಗಳ ಕೆರೆಗಳ ತುಂಬಿಸಲು 58 ಕೋಟಿ ರೂ. ವೆಚ್ಚದ ಬೆನಕನಹಳ್ಳಿ ಏತ ನೀರಾವರಿ ಯೋಜನೆ ಸೇರಿ ಒಟ್ಟು 518 ಕೋಟಿ ರೂ. ಸರಕಾರ ಬಿಡುಗಡೆ ಮಾಡಿದೆ. ಈ ಯೋಜನೆಯಡಿ ಎಲ್ಲಾ ಕೆರೆಗಳಿಗೂ ನೀರು ತುಂಬಿಸಲಾಗುವುದು ಎಂದರು.

ಗೋವಿನಕೋವಿ ಏತ ಕಾಮಗಾರಿ

ನ್ಯಾಮತಿ ತಾಲೂಕಿನ ಗೋವಿನಕೋವಿ ಗ್ರಾಮದ ಬಳಿಯ ತುಂಗಭದ್ರಾ ನದಿ ದಂಡೆಯಲ್ಲಿ ಹೊನ್ನಾಳಿ – ನ್ಯಾಮತಿ ತಾಲೂಕುಗಳ ನಾನಾ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸಲು 258 ಕೋಟಿ ರೂ. ವೆಚ್ಚದ ಏತ ನೀರಾವರಿ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಈ ಯೋಜನೆಗಳ ವಿದ್ಯುದೀಕರಣ ಪ್ರಕ್ರಿಯೆಗೆ 20 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕೆರೆಗಳ ಪುನಶ್ಚೇತನಕ್ಕೆ 70 ಕೋಟಿ ರೂ. ಬಿಡುಗಡೆಯಾಗಿದ್ದು, ಶೀಘ್ರವೇ ಟೆಂಡರ್‌ ಪ್ರಕ್ರಿಯೆ ಪ್ರಾರಂಭವಾಗಲಿದೆ. ಐದು ವರ್ಷಗಳ ಕಾಲಮಿತಿಯ ನಿರ್ವಹಣೆ ಷರತ್ತಿನೊಂದಿಗೆ ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಯುಜಿಡಿಗೆ 25 ಕೋಟಿ ರೂ.

ಹೊನ್ನಾಳಿ ಪಟ್ಟಣದ ಒಳಚರಂಡಿ ಯೋಜನೆಗೆ 25 ಕೋಟಿ ರೂ., ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆಗೆ 25 ಕೋಟಿ ರೂ., ಫಲವನಹಳ್ಳಿ ಬಹು ಗ್ರಾಮ ಶುದ್ಧ ಕುಡಿಯುವ ನೀರು ಪೂರೈಕೆಗೆ 60 ಕೋಟಿ ರೂ. ಅನುದಾನವನ್ನು ಸಿಎಂ ಬಸವರಾಜ ಬೊಮ್ಮಾಯಿ ಹೊನ್ನಾಳಿ ಕ್ಷೇತ್ರಕ್ಕೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಹೊನ್ನಾಳಿ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಪಡಿಸುವುದಾಗಿ ಭರವಸೆ ನೀಡಿದರು.

ಶಾಶ್ವತ ನೀರಾವರಿ ಸೌಲಭ್ಯ

ಹೊನ್ನಾಳಿ-ನ್ಯಾಮತಿ ತಾಲೂಕುಗಳ ಒಣ ಭೂಮಿ ಪ್ರದೇಶಕ್ಕೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ಮಹತ್ವಾಕಾಂಕ್ಷೆಯ 100 ಕೋಟಿ ರೂ. ಯೋಜನೆಯ ವಿಸ್ತೃತ ಯೋಜನಾ ವರದಿ ಈಗಾಗಲೇ ಸಿದ್ಧಪಡಿಸಲಾಗಿದೆ. ಶೀಘ್ರದಲ್ಲೇ ಅನುಮೋದನೆ ನೀಡಿ, ಅದಕ್ಕೂ ಸರಕಾರ ಹಣ ಬಿಡುಗಡೆ ಮಾಡಲಿದೆ. ತಾಲೂಕಿನ ಒಂದು ಪ್ರದೇಶದಲ್ಲಿ ತುಂಗಭದ್ರಾ ನದಿ ನೀರು ಸಂಗ್ರಹಿಸಿ, ಕಾಲುವೆಗಳ ಮೂಲಕ ಜಮೀನುಗಳಿಗೆ ಹರಿಸಿ, ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಾಸಕ ರೇಣುಕಾಚಾರ್ಯ ತಿಳಿಸಿದರು.

ಬಗರ್‌ಹುಕುಂ ಸಾಗುವಳಿ ಸಮಿತಿ ಅಧ್ಯಕ್ಷ ಕೆ.ಇ. ನಾಗರಾಜ್‌, ಜಿಪಂ ಮಾಜಿ ಸದಸ್ಯ ಎಂ.ಆರ್‌. ಮಹೇಶ್‌, ತಾಪಂ ಮಾಜಿ ಉಪಾಧ್ಯಕ್ಷ ಸಿ.ಆರ್‌. ಶಿವಾನಂದ್‌, ತುಂಗಾ ಮೇಲ್ದಂಡೆ ಯೋಜನೆ ಹೊನ್ನಾಳಿ ಉಪ ವಿಭಾಗದ ಎಇಇ ಕೆ.ಎಂ. ಮಂಜುನಾಥ್‌, ಎಂಜಿನಿಯರ್‌ಗಳಾದ ಆರ್‌. ಶ್ರೀನಿವಾಸ್‌, ಸಂತೋಷ್‌ ಹಿರೇಮಠ, ಚೇತನ್‌, ಅಭಿಷೇಕ್‌, ಪ್ರಶಾಂತ್‌, ಹನುಮಸಾಗರ ಗ್ರಾಪಂ ಅಧ್ಯಕ್ಷೆ ಬಸಮ್ಮ ನಾಗರಾಜ್‌, ಉಪಾಧ್ಯಕ್ಷೆ ಶೃತಿ ಮಂಜುನಾಥ್‌, ಸದಸ್ಯರು ಇದ್ದರು.



Read more