ಹೈಲೈಟ್ಸ್:
- ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಟೆಸ್ಟ್ ಸರಣಿ.
- ಪ್ರಸ್ತುತ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಸೆಣಸುತ್ತಿರುವ ಉಭಯ ತಂಡಗಳು.
- ಪ್ರತಿಯೊಂದು ಶತಕ ನನ್ನಲ್ಲಿ ವಿಶೇಷ ಭಾವನೆ ಮೂಡಿಸುತ್ತದೆ: ಕೆ.ಎಲ್ ರಾಹುಲ್.
- ಮೊದಲನೇ ದಿನದಾಟದ ಅಂತ್ಯಕ್ಕೆ ಭಾರತ 3 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿದೆ.
ಭಾನುವಾರ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಭಾರತ ತಂಡ ಮೊದಲನೇ ದಿನದಾಟದ ಅಂತ್ಯಕ್ಕೆ ಮೂರು ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿ ಉತ್ತಮ ಆರಂಭ ಪಡೆದುಕೊಂಡಿದೆ. ಮೊದಲನೇ ದಿನ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ ಕೆ.ಎಲ್ ರಾಹುಲ್ ವೃತ್ತಿ ಜೀವನ 7ನೇ ಶತಕ ಸಿಡಿಸಿದ್ದು, ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇವರ ಜೊತೆಗೆ ಅಜೇಯ 40 ರನ್ ಗಳಿಸಿರುವ ಅಜಿಂಕ್ಯ ರಹಾನೆ ಕ್ರೀಸ್ನಲ್ಲಿ ಉಳಿದಿದ್ದಾರೆ.
ಬಿಸಿಸಿಐ ಟಿವಿ ಸಂದರ್ಶನದಲ್ಲಿ ಮಾತನಾಡಿದ ಕೆ.ಎಲ್ ರಾಹುಲ್, “ಇದು ನಿಜವಾಗಿಯೂ ವಿಶೇಷವಾದದ್ದು ಹಾಗೂ ಪ್ರತಿಯೊಂದು ಶತಕ ನಿಮಗೆ ಖುಷಿ ನೀಡುತ್ತದೆ. ಶತಕ ಸಿಡಿಸಿದ ಕ್ಷಣದಲ್ಲಿ ಸಾಕಷ್ಟು ಭಾವನೆಗಳು ನಿಮ್ಮಲ್ಲಿ ಮೂಡಿಬರುತ್ತವೆ. 6 ರಿಂದ 7 ಗಂಟೆಗಳ ಕಾಲ ಕ್ರೀಸ್ನಲ್ಲಿ ಉಳಿಯುವುದು ಆಟಗಾರರಾಗಿ ಹೆಚ್ಚಿನ ಸಂತೋಷ ತಂದು ಕೊಡುತ್ತದೆ. ಈ ರೀತಿಯ ಇನಿಂಗ್ಸ್ ನನ್ನಿಂದ ನಿರೀಕ್ಷಿಸಲಾಗಿತ್ತು. ಒಮ್ಮೆ ಉತ್ತಮ ಆರಂಭ ಪಡೆದ ಬಳಿಕ ನಾನು ನನ್ನ ಬ್ಯಾಟಿಂಗ್ ಅನ್ನು ಆನಂದಿಸಿದೆ. ಇದಕ್ಕಿಂತ ಹೆಚ್ಚಿನದನ್ನು ನಾನು ಯೋಚನೆ ಮಾಡಿರಲಿಲ್ಲ,” ಎಂದು ಹೇಳಿದರು.
7ನೇ ಟೆಸ್ಟ್ ಶತಕ ಸಿಡಿಸಿ ನೂತನ ಮೈಲುಗಲ್ಲು ಸ್ಥಾಪಿಸಿದ ಕನ್ನಡಿಗ ರಾಹುಲ್!
ನೂತನ ಉಪ ನಾಯಕ ರೋಹಿತ್ ಶರ್ಮಾ ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದರಿಂದ ಕನ್ನಡಿಗರಾದ ಮಯಾಂಕ್ ಅಗರ್ವಾಲ್ ಹಾಗೂ ಕೆ.ಎಲ್ ರಾಹುಲ್ 2019ರ ಬಳಿಕ ಇದೇ ಮೊದಲ ಬಾರಿ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದರು ಹಾಗೂ 117 ರನ್ ಜೊತೆಯಾಟವವಾಡುವ ಮೂಲಕ ತಂಡಕ್ಕೆ ಭರ್ಜರಿ ಆರಂಭ ತಂದುಕೊಟ್ಟರು.
60 ರನ್ ಗಳಿಸಿ ಮಯಾಂಕ್ ಅಗರ್ವಾಲ್ ವಿಕೆಟ್ ಒಪ್ಪಿಸಿದ ಬಳಿಕ ನಾಯಕ ವಿರಾಟ್ ಕೊಹ್ಲಿ ಹಾಗೂ ಕೆ.ಎಲ್ ರಾಹುಲ್ ಅತ್ಯುತ್ತಮ ಜೊತೆಯಾಟವನ್ನು ಆಡುತ್ತಿದ್ದರು. ಅದರಂತೆ 35 ರನ್ ಗಳಿಸಿ ಆಡುತ್ತಿದ್ದ ವಿರಾಟ್ ಕೊಹ್ಲಿ, ಲುಂಗಿ ಎನ್ಗಿಡಿ ಎಸೆತದಲ್ಲಿ ಬಲವಾದ ಡ್ರೈವ್ಗೆ ಕೈಹಾಕಿ ಸ್ಲಿಪ್ನಲ್ಲಿ ಕ್ಯಾಚಿತ್ತರು. ಆ ಮೂಲಕ 71ನೇ ಶತಕ ಸಿಡಿಸುವ ತಮ್ಮ ಮತ್ತೊಂದು ಅವಕಾಶವನ್ನು ಕೊಹ್ಲಿ ಕೈಚೆಲ್ಲಿಕೊಂಡರು.
‘ನನ್ನ ಅಭಿಪ್ರಾಯಕ್ಕೆ ಅವಕಾಶವಿರಲಿಲ್ಲ’ ಎಲ್ಬಿಡಬ್ಲ್ಯು ಬಗ್ಗೆ ಮಯಾಂಕ್ ಬೇಸರ!
“ನಮ್ಮ ತಯಾರಿ ಅತ್ಯುತ್ತಮವಾಗಿತ್ತು ಹಾಗೂ ಮೊದಲನೇ ದಿನ ನಮ್ಮ ಬ್ಯಾಟ್ಸ್ಮನ್ಗಳ ಕ್ರೀಸ್ನಲ್ಲಿ ಹೆಚ್ಚಿನ ಗಮನ ಹರಿಸಿದ್ದರು. ಕ್ರೀಸ್ನಲ್ಲಿ ಹೆಚ್ಚು ಹೊತ್ತು ಉಳಿಯುವ ಬಗ್ಗೆ ನಾನು ಯೋಜನೆ ಹಾಕಿಕೊಂಡಿದ್ದೆ ಹಾಗೂ ಮದ್ಯಮ ಓವರ್ಗಳಲ್ಲಿ ನನ್ನನ್ನು ನಾನು ಸಮರ್ಪಿಸಿಕೊಂಡೆ. ಅಂದಹಾಗೆ ಮೊದಲನೇ ದಿನದ ನನ್ನ ಶಾಂತ ಸ್ವಭಾವದ ಬಗ್ಗೆ ನನಗೆ ಅಚ್ಚರಿ ಉಂಟಾಗಿದೆ. ಚೆಂಡು ಸಮೀಪಕ್ಕೆ ಬರುವ ತನಕ ಹೆಚ್ಚಿನ ಗಮನವನ್ನು ಕೇಂದ್ರಿಕರಿಸುವುದು ನನ್ನ ಯೋಜನೆಯಾಗಿತ್ತು. ಆರಂಭಿಕ ದಿನವನ್ನು ಅತ್ಯುತ್ತಮವಾಗಿ ಮುಗಿಸಿರುವುದಕ್ಕೆ ನನಗೆ ತುಂಬಾ ಖುಷಿ ಇದೆ,” ಎಂದು ಕೆ.ಎಲ್ ರಾಹುಲ್ ಸಂತಸ ವ್ಯಕ್ತಪಡಿಸಿದ್ದಾರೆ.