Karnataka news paper

ರೈತರ ಪರ್ಯಾಯ ಆದಾಯ ವೃದ್ಧಿಗೆ ಹೊಸ ನಿರ್ದೇಶನಾಲಯ ಸ್ಥಾಪನೆ : ಸಿಎಂ ಬೊಮ್ಮಾಯಿ


ಹೈಲೈಟ್ಸ್‌:

  • ರೈತರ ಪರ್ಯಾಯ ಆದಾಯ ವೃದ್ಧಿಗೆ ಹೊಸ ನಿರ್ದೇಶನಾಲಯ
  • ಹೈಸ್ಕೂಲ್‌ ಹೆಣ್ಣು ಮಕ್ಕಳಿಗೂ ವಿದ್ಯಾನಿಧಿ ವಿಸ್ತರಣೆ
  • ಮೈಸೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ

ಮೈಸೂರು : ರೈತರ ಆದಾಯವನ್ನು ಪರ್ಯಾಯ ಕ್ರಮಗಳ ಮೂಲಕ ವೃದ್ಧಿಸಲು ಹೊಸ ನಿರ್ದೇಶನಾಲಯವೊಂದನ್ನು ಸ್ಥಾಪನೆ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದರು. ಕಲಾಮಂದಿರದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ವಿಶ್ವ ರೈತ ದಿನಾಚರಣೆ ಅಂಗವಾಗಿ ರಾಜ್ಯಮಟ್ಟದ ಸಮಾವೇಶ ಹಾಗೂ ಕುರುಬೂರು ಶಾಂತಕುಮಾರ್‌ ಅವರಿಗೆ 40 ವರ್ಷಗಳ ಹೋರಾಟಕ್ಕೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಕೃಷಿ ಮತ್ತು ಕಲ್ಯಾಣ ಇಲಾಖೆ, ರೈತರ ಆದಾಯ ದ್ವಿಗುಣ ಸಮಿತಿ ಮುಖ್ಯಸ್ಥರಾದ ಅಶೋಕ್‌ ದಳವಾಯಿ ಅವರು ‘ಸೆಕೆಂಡರಿ ಫಾರ್ಮಿಂಗ್‌’ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನು ಪರಿಶೀಲಿಸಿ ರೈತರ ಆದಾಯ ದ್ವಿಗುಣಗೊಳ್ಳಲು ನಿರ್ದೇಶನಾಲಯವನ್ನು ನಮ್ಮ ಸರಕಾರ ಜಾರಿಗೊಳಿಸಲಿದೆ. ಅಲ್ಲದೆ, ರೈತರ ಆರ್ಥಿಕ ಸ್ಥಿತಿಗೆ ಉತ್ತಮವಾಗಬೇಕಾದರೆ ಸಮಗ್ರ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು ಎಂದು ತಿಳಿಸಿದರು.

ಹೈಸ್ಕೂಲ್‌ ಹೆಣ್ಣು ಮಕ್ಕಳಿಗೂ ವಿದ್ಯಾನಿಧಿ!
ರೈತರ ಮಕ್ಕಳಿಗೆ ಉನ್ನತ ಶಿಕ್ಷಣದಲ್ಲಿಅನುಕೂಲವಾಗಲೆಂಬ ಉದ್ದೇಶದಿಂದ ‘ವಿದ್ಯಾನಿಧಿ’ ಯೋಜನೆ ಜಾರಿಗೆ ತರಲಾಗಿದೆ. ಸದ್ಯ 2.40 ಲಕ್ಷ ರೈತರ ಮಕ್ಕಳಿಗೆ ಯೋಜನೆ ಲಾಭ ಸಿಗುತ್ತಿದೆ. ಮಾರ್ಚ್ ವೇಳೆಗೆ ಈ ಸಂಖ್ಯೆ 5 ಲಕ್ಷ ತಲುಪುವ ವಿಶ್ವಾಸವಿದೆ. ಅಲ್ಲದೆ, ಯೋಜನೆಯನ್ನು ಗ್ರಾಮೀಣ ಭಾಗದ ಹೈಸ್ಕೂಲ್‌ ಹೆಣ್ಣು ಮಕ್ಕಳಿಗೂ ವಿಸ್ತರಿಸಲಾಗುತ್ತದೆ ಎಂದು ತಿಳಿಸಿದರು.

ರೈತರಿಗೆ ಕಳಪೆ ಗುಣಮಟ್ಟದ ಟಾರ್ಪಲಿನ್ ನೀಡುವ ಸಂಸ್ಥೆಗಳು ಕಪ್ಪು ಪಟ್ಟಿಗೆ: ಸಚಿವ ಬಿ.ಸಿ. ಪಾಟೀಲ್

ಡಬ್ಲ್ಯೂಟಿಒದಿಂದ ಹೊರ ಬರಬೇಕು!
ರೈತರಿಗೆ ಬೆಲೆ ನಿಯಂತ್ರಣ ಹಾಗೂ ಬೆಲೆ ನಿಗದಿ ದೊಡ್ಡ ಸಮಸ್ಯೆ ಆಗಿದೆ. ಯಾವಾಗ ಡಬ್ಲ್ಯೂಟಿಒ (ವರ್ಲ್ಡ್ ಟ್ರೇಡ್‌ ಆರ್ಗನೈಜೇಶನ್‌)ಗೆ ಸಹಿ ಮಾಡಿದೆವು ಆಗಲೇ ನಮ್ಮ ಹಣೆಬರಹವನ್ನು ಅವರ ಕೈಗೆ ಕೊಟ್ಟೆವು. ಇಲ್ಲಿಮುಕ್ತ ಮಾರುಕಟ್ಟೆಗೆ ಅವಕಾಶವಿದೆ. ಆದರೆ, ಬೆಲೆ ನಿಯಂತ್ರಣ ಅಧಿಕಾರವನ್ನು ಕಳೆದುಕೊಂಡೆವು. 2007ರಲ್ಲೇ ರಿಲಯನ್ಸ್‌, ಮೆಟ್ರೋ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಕಂಪನಿಗಳು ಬಂದವು. ಆದರೆ, ಇದರಿಂದ ಆಗಬಹುದಾದ ದೂರಗಾಮಿ ಪರಿಣಾಮಗಳ ಬಗ್ಗೆ ಚಿಂತಿಸಲಿಲ್ಲ. ರೈತರ ಕಲ್ಯಾಣ ಆಗಬೇಕಾದರೆ ಗ್ರಾಮೀಣ ಕ್ರೆಡಿಟ್‌ ಪಾಲಿಸಿ ಬರಬೇಕು. ಜತೆಗೆ ಅಂತಾರಾಷ್ಟ್ರೀಯ ನೀತಿ-ನಿಯಮಗಳಿಂದ ಹೊರಗೆ ಬೇಕಿದೆ ಎಂದರು.

ತಿಂಗಳಲ್ಲಿ ಬೆಳೆನಷ್ಟ ಪರಿಹಾರ!

ಈ ಬಾರಿಯ ಅಕಾಲಿಕ ಮಳೆಯಿಂದ 12 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚು ಬೆಳೆನಷ್ಟ ಉಂಟಾಗಿದೆ. ಮೊದಲೆಲ್ಲಾ6 ತಿಂಗಳಾದರೂ ಬೆಳೆನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಸಿಗುತ್ತಿರಲಿಲ್ಲ. ಆದರೆ, ಈ ಬಾರಿ ಒಂದು ತಿಂಗಳಿನಲ್ಲೇ 800 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಲಾಗಿದೆ. ಮುಂದಿನ ಫೆಬ್ರವರಿ -ಮಾರ್ಚ್ ಒಳಗೆ ಎಲ್ಲರಿಗೂ ಬೆಳೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು. ಇದೇ ವೇಳೆ ಕುರುಬೂರು ಶಾಂತಕುಮಾರ್‌ ಹಾಗೂ ಅವರ ಪತ್ನಿ ಪದ್ಮಾ ಅವರನ್ನು ಸನ್ಮಾನಿಸಲಾಯಿತು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕೃಷಿ ಮತ್ತು ಕಲ್ಯಾಣ ಇಲಾಖೆ, ರೈತರ ಆದಾಯ ದ್ವಿಗುಣ ಸಮಿತಿ ಮುಖ್ಯಸ್ಥರಾದ ಅಶೋಕ್‌ ದಳವಾಯಿ, ವಿಶ್ವ ರೈತ ದಿನಾಚರಣೆ ಸಮಿತಿ ಅಧ್ಯಕ್ಷ ಡಾ.ಎಸ್‌.ಶಿವರಾಜಪ್ಪ, ಗೌರವಾಧ್ಯಕ್ಷ ಟಿ.ವಿ.ಗೋಪಿನಾಥ, ರಾಷ್ಟ್ರೀಯ ಅರಿಶಿನ ಬೆಳೆಗಾರರ ಸಂಘದ ಅಧ್ಯಕ್ಷ ದೈವ ಶಿಗಾಮಣಿ, ಹಿರಿಯ ಪತ್ರಕರ್ತರಾದ ಎಚ್‌.ಆರ್‌.ರಂಗನಾಥ್‌, ರವಿ ಹೆಗ್ಡೆ ಸೇರಿದಂತೆ ಇತರರು ಇದ್ದರು.



Read more