ತನ್ನ 6 ಎಕರೆ ಜಮೀನಿನಲ್ಲಿ ಹಿಪ್ಪುನೇರಳೆ, ನಾನಾ ತರಕಾರಿಗಳು, ರಾಸುಗಳ ಮೇವು, ಮೀನು ಸಾಕಾಣಿಕೆ, ಜೇನು ಸಾಕಾಣಿಕೆ, ರೇಷ್ಮೆ ಹುಳು ಸಾಕಾಣಿಕೆ, ಎತ್ತು ಎಮ್ಮೆ ಕುರಿ ಮೇಕೆ ಸಾಕಾಣಿಕೆ, ಗೊಬ್ಬರಿಕ್ಕಾಗಿಯೆ ಬೆಳೆಯುವ ಗ್ಲೆತ್ರೖಸೀಡಿಯಾ ಹಸಿರೆಲೆ ಗೊಬ್ಬರ.
ಹೀಗೆ ರೇಷ್ಮೆ, ಕೃಷಿ, ತೋಟಗಾರಿಕೆ, ಅರಣ್ಯ… ಹೀಗೆ ಸಮಗ್ರ ಕೃಷಿಯನ್ನು ಸಾಯವಯ ಪದ್ದತಿಯಲ್ಲೆ ಕೈಗೊಂಡು ಕಡಿಮೆ ವೆಚ್ಚದಲ್ಲಿ ಅಧಿಕ ಲಾಭ ಪಡೆದು ಕೃಷಿಯಲ್ಲೂ ಲಾಭ ಇದೆ ಎಂಬುದನ್ನು ಸಾಧಿಸಿ ತೋರಿಸುವ ಹಂತಕ್ಕೆ ಬೆಳೆದಿದ್ದಾರೆ.
ಅಗ್ನಿ ಅಸ್ತ್ರ, ದಶ ಪರ್ಣ, ಮೀನು ಕಷಾಯ, ನೀಮಾಸ್ತ್ರ, ಗೋಕೃಪಾಮೃತ ಜಲ… ಹೀಗೆ ಸಾವಯವ ಗೊಬ್ಬರ ಹಾಗೂ ಪೋಷಕಾಂಶಗಳನ್ನು ಸ್ವತಃ ತಯಾರಿಸಿ ಬಳಸುತ್ತಿದ್ದಾರಲ್ಲದೆ ಸ್ಥಳೀಯವಾಗಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಕೃಷಿ, ರೇಷ್ಮೆ ಪದವಿಯ ವಿದ್ಯಾರ್ಥಿಗಳಲ್ಲದೆ ಅಕ್ಕ ಪಕ್ಕದ ಗ್ರಾಮದ ನೆರೆ ಜಿಲ್ಲೆಗಳಿಂದಲೂ ಆಗಮಿಸುವ ಆಸಕ್ತರಿಗೆ ಸಾವಯವ ಕೃಷಿ ಕುರಿತು ಹಾಗೂ ಸಹಜ ಕೃಷಿ ಬಗ್ಗೆ ಪ್ರಾತ್ಯಕ್ಷಿತೆ ನೀಡುವ ಮೂಲಕ ಸಾವಿರಾರು ಮಂದಿಯನ್ನು ಸಾವಯವ ಕೃಷಿಯತ್ತ ಸೆಳೆದ ಹೆಗ್ಗಳಿಕೆ ಇವರದ್ದು.
ತುಮ್ಮನಹಳ್ಳಿಯಲ್ಲಿ ಆರಂಭಿಸಿರುವ ಶ್ರೀಚನ್ನಕೇಶವ ರೈತ ಉತ್ಪಾದಕರ ಕಂಪನಿಯಲ್ಲಿ ನಿರ್ದೇಶಕರಾಗಿಯೂ ವಿಜಯ್ ಕುಮಾರ್ ಕಾರ್ಯನಿರ್ವಹಿಸುತ್ತಿದ್ದು ಕಂಪನಿಯಲ್ಲಿನ ನೂರಾರು ರೈತರಿಗೆ ಮಾರ್ಗದರ್ಶನ, ಸಲಹೆ ಸೂಚನೆಗಳನ್ನು ನೀಡುವ ಕಾರ್ಯದಲ್ಲೂ ಸೈ ಎನಿಸಿಕೊಂಡಿದ್ದಾರೆ.
ಇವರು ಬಳಸುವ ಟ್ರ್ಯಾಕ್ಟರ್, ಟಿಲ್ಲರ್ ಹಾಗೂ ಪಂಪ್ಸೆಟ್ಗಳಿಗೆ ಬಯೋ ಡೀಸೆಲ್ ಬಳಸಿ ಇಂಧನ ಮಿತವ್ಯಯ ಹಾಗೂ ಪರ್ಯಾಯ ಇಂಧನ ಬಳಕೆಯ ಮೇಲೂ ಬೆಳಕು ಚೆಲ್ಲಿದ್ದಾರೆ.
ಇವರು ಕೃಷಿಯಲ್ಲಿ ಮಾಡಿದ ಸಾಧನೆಗೆ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಉತ್ತಮ ರೈತ ಪ್ರಶಸ್ತಿ, ಒಕ್ಕಲಿಗರ ಸಂಘದಿಂದ ಕೆಂಪೇಗೌಡ ಪ್ರಶಸ್ತಿ ಹಾಗೂ ಕೃಷಿ ಇಲಾಖೆಯಿಂದ ನೀಡುವ ಉತ್ತಮ ರಾಗಿ ಫಸಲು ಮತ್ತು ಇಳುವರಿ ತೆಗೆದ ರೈತರಿಗೆ ನೀಡುವ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಪ್ರಶಸ್ತಿ ಇವರಿಗೆ ದೊರೆತಿದೆ.