ಹೈಲೈಟ್ಸ್:
- ಭಟ್ಕಳದ ಸ್ಪಂದನ ಚಾರಿಟೆಬಲ್ ಟ್ರಸ್ಟ್ ಆಯೋಜಿಸಿದ್ದ ನೇತ್ರದಾನ ನೋಂದಣಿ ಶಿಬಿರ
- ಸ್ಥಳೀಯ 20ಕ್ಕೂ ಹೆಚ್ಚು ಸಂಘ – ಸಂಸ್ಥೆಗಳು ಸಹಕಾರ ನೀಡಿದ್ದವು
- ಉಡುಪಿಯ ಪ್ರಸಾದ್ ಸೂಪರ್ ಸ್ಪೆಷಾಲಿಟಿ ನೇತ್ರಾಲಯದ ಸಹಯೋಗದೊಂದಿಗೆ ನಡೆದ ಶಿಬಿರ
ಸಾಮಾಜಿಕ ಕಾರ್ಯಗಳ ಮೂಲಕ ಗಮನ ಸೆಳೆಯುತ್ತಿರುವ ಭಟ್ಕಳದ ಸ್ಪಂದನ ಚಾರಿಟೆಬಲ್ ಟ್ರಸ್ಟ್ ಆಯೋಜಿಸಿದ್ದ ಈ ನೇತ್ರದಾನ ನೋಂದಣಿ ಶಿಬಿರಕ್ಕೆ ಸ್ಥಳೀಯ 20ಕ್ಕೂ ಹೆಚ್ಚು ಸಂಘ – ಸಂಸ್ಥೆಗಳು ಸಹಕಾರ ನೀಡಿದ್ದವು. ಉಡುಪಿಯ ಪ್ರಸಾದ್ ಸೂಪರ್ ಸ್ಪೆಷಾಲಿಟಿ ನೇತ್ರಾಲಯದ ಸಹಯೋಗದೊಂದಿಗೆ ಭಟ್ಕಳದ ತಾಲೂಕು ಆಸ್ಪತ್ರೆಯಲ್ಲಿ ಈ ನೋಂದಣಿ ಕಾರ್ಯ ನಡೆಯಿತು.
ಅನೇಕ ಸಂಘ – ಸಂಸ್ಥೆಗಳು, ಯುವಕ – ಯುವತಿಯರು ಗುಂಪು ಗುಂಪಾಗಿ ಬಂದು ನೋಂದಾಯಿಸಿದರೆ, ಸರ್ಕಾರಿ ನೌಕರರು, ಕಾಲೇಜು ವಿದ್ಯಾರ್ಥಿಗಳು, ಹೆಚ್ಚಿನ ಸಂಖ್ಯೆಯ ಯುವಕ – ಯುವತಿಯರು ಈ ಶಿಬಿರದಲ್ಲಿ ಕುಟುಂಬ ಸಮೇತರಾಗಿ ಹೆಸರು ನೋಂದಣಿ ಮಾಡಿಸಿದ್ದಾರೆ.
ಇನ್ನು ಈ ಶಿಬಿರವನ್ನ ಸ್ಥಳೀಯ ಶಾಸಕ ಸುನೀಲ್ ನಾಯ್ಕ ಉದ್ಘಾಟಿಸಿದರು. ಸ್ಪಂದನ ಸೇರಿದಂತೆ ಇನ್ನಿತರ ಸಂಸ್ಥೆಗಳು ಈ ಸಾಮಾಜಿಕ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಸರ್ಕಾರ ಮಾಡಬೇಕಾದ ಕಾರ್ಯವನ್ನ ಸಂಘ – ಸಂಸ್ಥೆಗಳು ಮಾಡುತ್ತಿರುವುದು ನಿಜಕ್ಕೂ ಮೆಚ್ಚುವಂಥದ್ದು ಎಂದರು.
ಈ ಕಾರ್ಯಕ್ರಮದಲ್ಲಿ ಕೇವಲ ನೇತ್ರದಾನಕ್ಕೆ ನೋಂದಣಿಯಷ್ಟೇ ಅಲ್ಲ, ಶಿಬಿರದಲ್ಲಿ ನೇತ್ರ ತಪಾಸಣಾ ಕಾರ್ಯವೂ ನಡೆದಿದೆ. ಪ್ರಸಾದ್ ನೇತ್ರಾಲಯದ ತಜ್ಞರು ಕಣ್ಣಿನ ಪರೀಕ್ಷಾ ಕಾರ್ಯ ನಡೆಸಿದರು. ಸುಮಾರು 250 ಮಂದಿ ಇಲ್ಲಿ ಉಚಿತವಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಂಡರೆ, 60 ಮಂದಿಗೆ ಕನ್ನಡಕ ವಿತರಿಸಲಾಗಿದೆ. ಇನ್ನು 39 ಜನರನ್ನು ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಗಿದೆ. ಒಟ್ಟಾರೆ ಈ ಮೊದಲೆಲ್ಲಾ ನೇತ್ರದಾನದ ಕುರಿತಾಗಿ ಇದ್ದ ಮೂಢನಂಬಿಕೆಗಳು ಮರೆಯಾಗಿ, ಡಾ. ರಾಜ್ ಕುಟುಂಬ ಮಾಡಿದ ಸಾಮಾಜಿಕ ಕಾರ್ಯವೀಗ ಲಕ್ಷಾಂತರ ಅಂಧರ ಬಾಳಲ್ಲಿ ಬೆಳಕು ತರಲು ಹಲವರಿಗೆ ಪ್ರೇರಣೆಯಾಗಿರುವುದಂತೂ ಸತ್ಯ.

ಪುನೀತ್ ಪ್ರೇರಣೆ: ಭಟ್ಕಳದಲ್ಲಿ 2,500ಕ್ಕೂ ಹೆಚ್ಚು ಜನರಿಂದ ನೇತ್ರದಾನಕ್ಕೆ ನೋಂದಣಿ..!